Saturday, June 22, 2013

ಈ ಟಿವಿ ಕನ್ನಡ ... ಇದು ನಮ್ಮ ಚಾನೆಲ್ ...

ಸುಧಾಮೂರ್ತಿಯವರ "ಏರಿಳಿತದ ದಾರಿಯಲ್ಲಿ" ಪುಸ್ತಕದ ಕಥೆ ಎಂಬ ನೆನಪು ...
ಒಬ್ಬ ಧರ್ಮಾತ್ಮ ಯಾವುದೇ ಪ್ರತಿಫಲವನ್ನು ಬಯಸದೆ ಸುಧಾರವರ ಸಮಾಜ ಸೇವೆಗೆ ಸಹಾಯ ಮಾಡುತ್ತಿರುತ್ತಾನೆ.
ಆತ ಕಾಲವಾದ ನಂತರ ಅಧಿಕಾರ ವಹಿಸಿಕೊಳ್ಳುವ ಆತನ ಮಗ ಸುಧಾರವರಿಗೆ ನೀವು ನಮಗೆ ಮೋಸ ಮಾಡುತ್ತಿದ್ದಿರೆಂದು ನಮ್ಮ ಸಹಾಯ ಮುಂದುವರೆಯಬೇಕಾದರೆ ನಮ್ಮ ಕಂಪನಿಯ ಹೆಸರನ್ನು ಜಾಹಿರಾತಿನಲ್ಲಿ ಪ್ರಕಟಿಸಬೇಕೆಂದು ಒತ್ತಾಯಿಸುತ್ತಾನೆ.
ಇಲ್ಲಿ ಏನಾಯಿತೆಂದರೆ "Idelogical shift". ಕಾರ್ಯವೈಖರಿ,ನಿಲುವು ಧೋರಣೆ ಎಲ್ಲವು ಭಿನ್ನ..
ಇದನ್ನು ಇಲ್ಲೇಕೆ ಪ್ರಸ್ತಾಪಿಸಿದೆ ಎಂಬುದು ಕೆಳಗಿನ ಲೇಖನ ಓದಿದ ಮೇಲೆ ತಿಳಿಯುತ್ತದೆ.

ಒಂದು ದಶಕದ ಹಿಂದಿನ ಮಾತು . ಪಟ್ಟಣದ ಸ್ಥಿತಿ ನನಗೆ ಗೊತ್ತಿಲ್ಲ ಆದರೆ ನಾನಿದ್ದ ಹಳ್ಳಿಯಲ್ಲಿ,ಅಲ್ಲಿನ ಕಿರುತೆರೆಯಲ್ಲಿ ಬರುತ್ತಿದದ್ದು ಕೆಲವೇ ಕೆಲವು ಚಾನೆಲ್ ಗಳು.ಅದರಲ್ಲೂ ಆಂಧ್ರದ ಗಡಿಗೆ ಹತ್ತಿರವಿರುವ ನಮಲ್ಲಿ ಕೇವಲ ಕನ್ನಡ,ತೆಲುಗು,ಒಂದೋ ಎರಡೋ ಹಿಂದಿ ಚಾನೆಲ್ ಗಳು (ಡಿ ಡಿ ೧ ಸೇರಿ) ಬರುತ್ತಿದ್ದವು.              
                   

ಅದೊಂದು ಭಾನುವಾರವೆಂಬ ನೆನಪು. ಕೇವಲ ಚಂದನ,ಉದಯ ಟಿವಿ ಇದ್ದ ಕನ್ನಡದ ಚಾನೆಲ್ ಗಳ ಪಟ್ಟಿಗೆ ಒಂದು ಹೊಸ ಚಾನೆಲ್ ಸೇರ್ಪಡೆಯಾಗುತ್ತಿತ್ತು. ಹತ್ತು ಗಂಟೆ ಅಥವಾ ಹನ್ನೊಂದು ಗಂಟೆ ಅನಿಸುತ್ತದೆ. ೫ ನಿಮಿಷದ ವಾರ್ತೆಯೊಂದಿಗೆ ಪ್ರಾರಂಭವಾಗಿ,ರಾಜ್ ಅಭಿನಯದ ಗಂಧದ ಗುಡಿ ಚಲಚಿತ್ರವನ್ನು ಪ್ರಸಾರ ಮಾಡಿತ್ತು. ಈ ಚಾನೆಲ್ ತನ್ನ ಉತ್ತಮ ಅಭಿರುಚಿಯ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎಲ್ಲರ ಮನಗೆದ್ದಿತು.

ಈ ಚಾನೆಲ್ ನಲ್ಲಿ ನಾನು ನೋಡಿ ಬೆಳೆದ ಕೆಲವು ಕಾರ್ಯಕ್ರಮಗಳನ್ನು ಇಲ್ಲಿ ಉಲ್ಲೇಖಿಸುತ್ತಿದೇನೆ.
"ಅನ್ನದಾತ",
"ಅಗ್ರ ರಾಷ್ಟ್ರೀಯ ವಾರ್ತೆ"
(ಪ್ರಭಾವ-ಪಕ್ಷಪಾತವಿಲ್ಲದ ನ್ಯೂಸ್; ಇಂದು ಕನ್ನಡ ಒಂದರಲ್ಲೇ ೫-೬ ನ್ಯೂಸ್ ಚಾನೆಲ್ ಗಳಾಗಿವೆ. ಇವುಗಳಲೆಲ್ಲ ಇರುವ ನ್ಯೂಸ್ ರೀಡರ್ಸ್ ಗಳಲೆಲ್ಲ ಈ ಟಿವಿ ಗರಡಿಯಲ್ಲೇ ಪಳಗಿದವರು),
ಗಾನ ಕೋಗಿಲೆ ಎಸ್ ಪಿ ಬಾಲಸುಬ್ರಮಣ್ಯಂರವರನ್ನು ಕಿರುತೆರೆಗೆ ತಂದ, ವಿನಯ ಪ್ರಸಾದ್ ನಿರೂಪಿಸುತ್ತಿದ್ದ, ಅಂಚೆ ಮೂಲಕ ನಾವು ಕಳುಹಿಸುತ್ತಿದ್ದ ಹಾಡುಗಳನ್ನು ಹಾಡಿಸುತ್ತಾ, ನಮ್ಮ ನೆಲದ ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದ "ಎದೆ ತುಂಬಿ ಹಾಡುವೆನು",
ಎಸ್ ಎಲ್ ಭೈರಪ್ಪನವ ಕಾದಂಬರಿ ಆಧಾರಿತ ಧಾರವಾಹಿ "ಗೃಹಭಂಗ",
(ಪ್ರತಿ ಶನಿವಾರ ಸಂಜೆ ಏಳು ಮೂವತಕ್ಕೆ ಪ್ರಸಾರವಾಗುತ್ತಿತ್ತು. ಕಾದಂಬರಿ ಓದುವಾಗ ಇದೆ ಧಾರಾವಾಹಿಯ ಪಾತ್ರಗಳೇ ಕಣ್ಮುಂದೆ ಬರುತ್ತಿದ್ದವು. http://www.youtube.com/watch?v=fDaNNPgQNzs; ಈ ಲಿಂಕ್ ನೋಡಿ, ನಿಮ್ಮ ನೆನಪು ಹಸಿರಾಗಬಹುದು),
ಟಿ ಎನ್ ಸೀತಾರಾಂ ರವರ ಭಾವನೆಗಳ ಬಣ್ಣದ ಚಿತ್ರಣ, ಕುತೂಹಲದ ಕೌತುಕವಾದ  "ಮನ್ವಂತರ","ಮುಕ್ತ","ಮುಕ್ತ-ಮುಕ್ತ" ಧಾರಾವಾಹಿಗಳು,
ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುತ್ತಿದ್ದ "ಪಾಪ ಪಾಂಡು","ಸಿಲ್ಲಿ ಲಲ್ಲಿ",
ಸಿನಿಮಾ ತಾರೆಯವರುಗಳ ಹಿನ್ನಲೆಯನ್ನು ತೋರಿಸುತ್ತಿದ್ದ "ಆಟೋಗ್ರಾಫ್ ಪ್ಲೀಸ್",
ಜಯಂತ್ ಕಾಯ್ಕಿಣಿ ನಿರೂಪಿಸುತ್ತಿದ್ದ "ರಸ ಋಷಿಗೆ ನಮಸ್ಕಾರ", "ವರಕವಿಗೆ ನಮನ","ಕಡಲ ತೀರ ಭಾರ್ಗವನಿಗೆ ನಮನ",
ಸಿ ಅಶ್ವಥ್ ನೇತೃತ್ವದ "ಕನ್ನಡವೇ ಸತ್ಯ",
ಪ್ರವೀಣ್ ಗೋಡ್ಖಿಂಡಿ ನೇತೃತ್ವದ "ರಾಗ ರಂಜನಿ",
"ಪಂಚ ತಂತ್ರ",
ರವಿ ಬೆಳೆಗೆರೆ ಮುಂದಾಳತ್ವದಲ್ಲಿ ಮೋದಿ ಬರುತ್ತಿದ್ದ "ಎಂದೂ ಮರೆಯದ ಹಾಡು",
ಇಂತಹ ಹತ್ತಾರು ಹಲವಾರು ಕಾರ್ಯಕ್ರಮಗಳ ಕಲಶದಂತಿದ್ದ ಈ ಟಿವಿ ವಾಟಿಕಾ "ವರ್ಷದ ಕನ್ನಡಿಗ"....

ಇಂತಹ ಸದಭಿರುಚಿಯ ಕಾರ್ಯಕ್ರಮಗಳನ್ನು ನಮಗೆ ನೀಡಿದ್ದ ನಮ್ಮ ಚಾನೆಲ್ ನಲ್ಲಿ ಇಂದು ಎಲ್ಲವೂ "ಬಿಗ್ ಬಾಸ್" ಮಾಯ.
F.D.I ಭಾರತಕ್ಕೆ ಬಂದರೆ ನಮ್ಮ ಚಿಲ್ಲರೆ ವ್ಯಾಪರಿಗಳಿಗಾಗುವ ಗತಿ ಬಿಗ್ ಬಾಸ್ ನಿಂದ ಉಳಿದ ಕಾರ್ಯಕ್ರಮಗಳಿಗಾಗಿದೆ.
ಬೆಳೆದಿರುವ ಸಂವಹನ (Communication) ಕ್ಷೇತ್ರದಲ್ಲಿ ಹೊಸ ಹೊಸ ಚಾನೆಲ್ ಗಳು ನೀಡುತ್ತಿರುವ ಪೈಪೋಟಿಗೆ ಸರಿಯಾದ ಉತ್ತರವೆನನ್ನೋ ಈ ಟಿವಿ ಬಿಗ್ ಬಾಸ್ ನಿಂದ ನೀಡಿದೆ. ಇದರಿಂದ ದೊರೆಯುತ್ತಿರುವುದು ಕೇವಲ ಮನೋರಂಜನೆ. ಒಳಗಿರುವ ಸ್ಪರ್ಧಿಗಳಿಗೆನೋ ತಮನ್ನು ತಾವು ಅರ್ಥ ಮಾಡಿಕೊಳ್ಳಲು, ತಿದ್ದಿ ನಡಿಯುವ ಉತ್ತಮ ಅವಕಾಶ. ನಮಗೆ ನಮ್ಮ ವ್ಯಕ್ತಿತ್ವದ ಅಭಿವೃದ್ದಿಗೆ ಆಗುವ ಪ್ರಯೋಜನ? ಶೂನ್ಯ !!!

ಮೇಲೆ ಹೇಳಿದ ಹಲವಾರು ಕಾರ್ಯಕ್ರಮಗಳಿಂದ ದೊರೆಯುತ್ತಿದ್ದ ಜ್ಞಾನ,ಸೂಕ್ಷ್ಮತೆ,ಸಾಹಿತ್ಯ ಕಲೆ,ಸಂಗೀತ,ಬೆಳೆಯುವ ಮಕ್ಕಳಿಗೆ ನೀಡುತ್ತಿದ್ದ ಅಭಿರುಚಿ,ಸಾಮಾಜಿಕ ಕಳಕಳಿ ಇವೆಲ್ಲವುಕ್ಕೂ ಪೂರ್ಣ ವಿರಾಮ ಬಿದ್ದಂತೆ ಆಗಲ್ಲಿಲ್ಲವೇ.

ಆಗ್ರಾ ರಾಷ್ಟ್ರೀಯ ವಾರ್ತೆಯನ್ನೇ ನಿಲ್ಲಿಸುವಂತಹ ಸ್ಥಿತಿ ಈ ಟಿವಿ ಗೆ ಏಕೆ ಬಂತು. ಲೇಖನದ ಮೊದಲ್ಲಲ್ಲಿ ಹೇಳಿದ Idelogical shift ಏನಾದರು ಚಾನೆಲ್ ನಲ್ಲಿ ಆಗುತ್ತಿದೆಯೇ?

"ಬದಲಾವಣೆ ಜಗದ ನಿಯಮ" ನಿಜ. ಆದರೆ ನಮ್ಮ ಬೇರನ್ನೇ ಅಲುಗಾಡಿಸಲು ನಾವು ಆ ಬದಲಾವಣೆಯ ಬಿರುಗಾಳಿಗೆ ಅವಕಾಶವನ್ನು ಕೊಡಬಾರದಲ್ಲವೇ ?

ನಾನೇನು ಬಿಗ್ ಬಾಸ್ ವಿರೋಧಿಯಲ್ಲ. ನಾನು ಬಿಗ್ ಬಾಸ್ ವೀಕ್ಷಕನೆ.
ಬೇರೆ ಚಾನೆಲ್ ಗಳ ಟಿ ಆರ್ ಪಿ ಇಳಿಸುವಂತಹ ಬಿಗ್-ಬಾಸ್ ಸಹ ಬರಲಿ; ಹಾಗೆಯೇ ಹಳೆಯ ಈ ಟಿವಿ ಮತ್ತೆ ನಮ್ಮ ಚಾನೆಲ್ ಆಗಲಿ.


No comments:

Post a Comment