Saturday, October 10, 2015

ಬಯಲುಸೀಮೆ ಬವಣೆ ಹಾಗೂ ಎತ್ತಿನಹೊಳೆ . . .

ಯಾವುದೇ ವಿಚಾರವಾಗಲಿ ಅಲ್ಲಿ ಪರ-ವಿರೋಧದ ಕೂಗು ಇರಬೇಕು. ಆಗಲೇ ಆ ವಿಚಾರದ ಸಾಧಕ-ಬಾದಕ ಅರಿವು ಮೂಡುವುದು. ಅದೇ ನಮ್ಮ ಪ್ರಜಾಪ್ರಭುತ್ವದ ತಳಹದಿಯೂ ಹೌದು. ವಿರೋಧವೇ ಇಲ್ಲ ಎನ್ನುವುದಾದರೆ ನಮಗೂ ಕಮ್ಯುನಿಷ್ಟರಿಗೂ ವ್ಯತ್ಯಾಸವೇ. ಇರುವುದಿಲ್ಲ. ಸಂಸದರ ಸಂಬಳ ಹೆಚ್ಚಳವಾಗಿರಬಹುದು, ಮೋದಿ ಸರ್ಕಾರದ ಕಾರ್ಯಕ್ರಮಗಳಿರಬಹುದು, ಪ್ರಶಸ್ತಿಯ ವಿಚಾರಗಳಾಗಿರಬಹುದು ಪರ-ವಿರೋಧಗಳಿರಬೇಕು; ಚರ್ಚೆಗಳಿಗೆ ವೇದಿಕೆಗಳು ನಿರ್ಮಾಣವಾಗಬೇಕು. ಆಗಲೇ ನಮ್ಮ ಆಲೋಚನೆ,ಚಿಂತನೆ,ಜ್ಞಾನ ಹೆಚ್ಚುವುದು. ಆದರೆ ನಮ್ಮ ದೇಶದಲ್ಲಿ ಚರ್ಚೆಗಳೇ ಆಗುವುದಿಲ್ಲ. ಜನರನ್ನು ಭಾವನಾತ್ಮಕವಾಗಿ ಎತ್ತಿಕಟ್ಟುವ ಕೆಲಸ ಮಾತ್ರ ನೆಡೆಯುತ್ತದೆ. ಅದು ಕಾವೇರಿಯಾಗಲಿ, ನೇತ್ರಾವತಿಯಾಗಲಿ, ಕಳಸ-ಬಂಡೂರಿಯಾಗಲಿ ಎಲ್ಲವೂ ಅಷ್ಟೇ.

ಮಾರ್ಚ್ 3 2014 ರಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಆಗಿತ್ತು.  ಕಾರಣ: "ಎತ್ತಿನಹೊಳೆ" ಎಂಬ ಯೋಜನೆಯ ಶಿಲಾನ್ಯಾಸ.
ಯಾವ ಜಿಲ್ಲೆಗಳಿಗೆ ಇದು ನೀರಾವರಿ ಯೋಜನೆ ಎಂದು ಹೇಳಲಾಗುತ್ತಿತ್ತೋ ಅಲ್ಲೂ ಸಹ ಪ್ರತಿಭಟನೆಗಳು ಜರುಗಿದವು; ಕಾರಣ: "ಪರಮಶಿವೈಯ್ಯ ವರದಿಯ" ಶಾಶ್ವತ ನೀರಾವರಿ ಯೋಜನೆ ಜಾರಿಯಾಗಬೇಕು ಎಂಬ ಹೋರಾಟ.

ಈಗ ಮತ್ತೆ ಒಂದೂವರೆ ವರ್ಷಗಳ ನಂತರ ಕರವಾಳಿಯಲ್ಲಿ ಎತ್ತಿನಹೊಳೆ ಯೋಜನೆಯ ವಿರೋಧದ ಕೂಗು ಹೆಚ್ಚುತ್ತಿದೆ.
ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರೋಧದ ಪೋಸ್ಟ್ಗಳನ್ನು ನೋಡುತ್ತಿದ್ದೇನೆ.
ಕರಾವಳಿಗರು ಹೇಳುತ್ತಿರುವುದು: ಎತ್ತಿನಹೊಳೆ ಯೋಜನೆ ನೇತ್ರಾವತಿ ತಿರುವು ಯೋಜನೆಯ ಮತ್ತೊಂದು ಹೆಸರು ಅಥವಾ ಅದರ ಮುನ್ನುಡಿ. ಇದರಿಂದ ಪಶ್ಚಿಮ ಘಟ್ಟಗಳ ಸಸ್ಯ ಸಂಕುಲ, ಜೀವ ರಾಶಿಯ ಮೇಲೆ ಅಗಾಧ ಪರಿಣಾಮವಾಗುತ್ತದೆ.
ಮಳೆ ಕಡಿಮೆಯಾಗುತ್ತದೆ, ಸಮುದ್ರದ ನೀರು ಹಿಂದೆ ಸರಿದು ಉಪ್ಪು ನೀರು ಬಾವಿ, ಜಮೀನುಗಳಿಗೆ ನುಗ್ಗುತ್ತದೆ ಇದರಿಂದ ನಮ್ಮ ಜೀವನ ಬರಡಾಗುತ್ತದೆ ಎಂದು.
 
ಆದರೆ ಬಯಲು ಸೀಮೆಯ ಎತ್ತಿನಹೊಳೆ ಯೋಜನೆಯ ಪ್ರತಿಪಾದಕರು ಹೇಳುವುದು: ಎತ್ತಿನಹೊಳೆ ನೇತ್ರಾವತಿ ತಿರುವು ಯೋಜನೆಯಲ್ಲ. ನೇತ್ರಾವತಿಯ ಉಪನದಿಗಳಾದ ಎತ್ತಿನಹೊಳೆ, ಕಾಡುಮನೆ ಹೊಳೆ, ಕೆರಿಹೊಳೆ, ಹೊಂಗಡ ಹಳ್ಳ ಇವುಗಳಿಂದ ಮಳೆಗಾಲದ ನೂರು ದಿನಗಳಲ್ಲಿ ಉಪಲಬ್ದವಾಗುವ ನೀರಿನ ಪ್ರಮಾಣದಲ್ಲಿ ಶೇಕಡಾ ಐವತ್ತರಾಷ್ಟನ್ನು
ಕೊಳವೆಗಳ ಮೂಲಕ ರೈಲು ಮಾರ್ಗದ ಪಕ್ಕದಲ್ಲಿ ಬಯಲುಸೀಮೆಗೆ ಸಾಗಿಸುವುದು.  

ನನ್ನ ಕರವಾಳಿಯ ಮಿತ್ರರೇ ಐದು ವರ್ಷದಿಂದ ಮಂಗಳೂರಿನಲ್ಲಿ ಜೀವಿಸಿದ್ದೇನೆ. ಹರಿಯುವ ನೇತ್ರಾವತಿಯನ್ನು ಕಂಡು ಆನಂದಿಸ್ಸಿದ್ದೇನೆ. ಮಳೆಗಾಲದಲ್ಲಿ ಸುರಿವ ಮಳೆಯ ಪ್ರಮಾಣವನ್ನು ಬಲ್ಲೆ. ಯೋಜನೆಗೆ ನಿಮ್ಮ ವಿರೋಧ ಸಹಜವಾದದ್ದೇ. ಸರ್ಕಾರ ನಿಮ್ಮನ್ನು ವಿಶ್ವಾಸಕ್ಕೆ ತಗೆದುಕೊಳ್ಳಬೇಕು. ಆಗಂತ ದಯವಿಟ್ಟು ಇಪ್ಪತ್ನಾಲ್ಕು ಟಿಎಂಸಿ ಯ ಎತ್ತಿನಹೊಳೆ ಯೋಜನೆಗೆ ವಿರೋಧಿಸಲು ನಾಲ್ಕುನೂರಾ ಇಪ್ಪತ್ತು ಟಿಎಂಸಿ ಯ ನೇತ್ರಾವತಿಯನ್ನು ಮರುಭೂಮಿಯಂತೆ ಚಿತ್ರಿಸಿ ಮಾತ್ರ ಪ್ರತಿಭಟನೆ ಮಾಡದಿರಿ. ಅದು ನಿಮ್ಮ ಭೌದ್ದಿಕ ಮಟ್ಟಕ್ಕೆ ತಕ್ಕದಾದುದ್ದಲ್ಲ. ಯಾವುದೇ ಸರ್ಕಾರ ತಮ್ಮಿಂದ ಕಿತ್ತುಕೊಂಡು ಬಯಲುಸೀಮಿಗೆ ಕೊಡುವ ಧೈರ್ಯ ಮಾಡುವುದಿಲ್ಲ. ಮತ್ತೆ ಚುನಾವಣೆ ಬಂದೆ ಬರುತ್ತದೆ. ರಾಜಕಾರಣಿಗಳು ನಿಮ್ಮನ್ನು ಎದುರಿಸಲೇ ಬೇಕು. ಆ ಅರಿವು ಅವಿರಿಗಿಲ್ಲವೇ. ಸನ್ಮಾನ್ಯ ಯು . ಟಿ . ಖಾದರ್ ರವರೆ, ಒಂದು ಎತ್ತಿನಹೊಳೆ ವಿಫಲ ಯೋಜನೆ ಎಂಬ ಸ್ಟ್ಯಾಂಡ್ ತಗೆದುಕೊಳ್ಳಿ ಇಲ್ಲ ಸಫಲ ಯೋಜನೆಯಾಗಬಹುದು ಎಂದು ಹೇಳಿ. ದಯಮಾಡಿ ಇದು ಹೊರಟಿರುವ ಬಸ್ಸು ನಿಲ್ಲಿಸಲಾಗುವುದಿಲ್ಲ ಎಂಬ ಅಡ್ಡ ಮಾತು ಮಾತ್ರ ಬೇಡ. ನಿಮ್ಮಂತಹ ಪ್ರಾಮಾಣಿಕ ರಾಜಕಾರಣಿಗೆ ಅದು ಸರಿ ಹೊಂದುವುದಿಲ್ಲ.

ಇನ್ನು ಬಯಲು ಸೀಮೆಯ ಶಾಶ್ವತ ನೀರಾವರಿ ಹೋರಾಟಗಾರರು ಹೇಳುವುದು: ಜಿ ಎಸ್ ಪರಮಶಿವಯ್ಯ ವರದಿಯ ಪ್ರಕಾರ ಪಶ್ಶಿಮ ಘಟ್ಟದಲ್ಲಿ ಸರಿಸುಮಾರು ಮೂರುಸಾವಿರ ಟಿಎಂಸಿ ನೀರಿದ್ದೂ ಅದರಲ್ಲಿ ಬಳಕೆ ಆಗುತ್ತಿರುವ ಮುನ್ನೂರು ಟಿಎಂಸಿ ನೀರನ್ನು ಬಿಟ್ಟು ಉಳಿದ ಎರಡು ಸಾವಿರದ ಏಳ್ನೂರು ಟಿಎಂಸಿ ನೀರನ್ನು ಬಯಲುಸೀಮಿಗೆ ಹರಿಸಿ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತನ್ನಿ ಎನ್ನುವುದು. ಇಪ್ಪತ್ನಾಲ್ಕು ಟಿಎಂಸಿಯ ಕುಡಿಯುವ ನೀರಿನ ಎತ್ತಿನಹೊಳೆ ಯೋಜನೆಗೆ ಸಹಮತ ಮೂಡಿಲ್ಲ ಇನ್ನೂ ಶಾಶ್ವತ ಹೋರಾಟದ ಅನುಷ್ಟಾನ ಅದು ಕನಸ್ಸೇ ಸರಿ !!!

ಅಲ್ಲ ಸ್ವಾಮಿ ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ಅಳಿಯಲು ಬಿಳಿಗುಂದಲು  ಎಂಬ ಸ್ಥಳದಲ್ಲಿ ಕೇಂದ್ರವೊಂದಿದೆ. ಅಂತದೆ ಒಂದು ಕೇಂದ್ರವನ್ನು ಪಶ್ಚಿಮ ಘಟ್ಟದ ಒಂದು ಸ್ಥಳದಲ್ಲಿ ಏಕೆ ಸ್ಥಾಪಿಸಬಾರದು. ಆಗಲಾದ್ರೂ ಪ್ರೊಫೆಸ್ಸೊರ್ಗಳ ಅಂದಾಜಲ್ಲದೆ ಸರಿಯಾದ ಅಂಕಿ ಅಂಶ ಸಿಗುತ್ತದೆ ತಾನೇ. ಪರಮಶಿವಯ್ಯ ವರದಿ ಇಂದ ಪಶ್ಚಿಮ ಘಟ್ಟಕ್ಕೆ ಹಾನಿಯಾಗುವುದು ಎಂದರೆ ಬೇರೆ ಮಾರ್ಗಗಳನ್ನು ಹುಡುಕಿ. ಇಲ್ಲ ಹಾನಿ ಇಲ್ಲದೆಯೇ ಗುರುತ್ವಾಕರ್ಷಣೆಯಿಂದ ನೀರು ತರುತ್ತೇವೆ ಎನ್ನುವುದಾದರೆ ಕರಾವಳಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಒಟ್ಟಿನಲ್ಲಿ ಏನಾದರೂ ಮಾಡಿ.

ನೀರಿನ ಬವಣೆ ಬಯಲುಸೀಮೆಯವರಿಗಿಂತ ಚೆನ್ನಾಗಿ ಬೇರೆ ಯಾರಿಗೂ ಗೊತ್ತಿರಲು ಸಾಧ್ಯವೇ ಇಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಜಿಲ್ಲಾವಾರು ಸಂಖ್ಯೆ ನೋಡಿದರೆ ತಿಳಿಯುತ್ತದೆ. ಒಂದೇ ದಿನ 1000 ಅಡಿಗಳ ಐದಾರು ಕೊಳವೆ ಬಾವಿಗಳನ್ನು ತೊಡಿಸಿ ಒಂದರಲ್ಲೂ ಒಂದನಿ ನೀರು ಸಿಗದೆ ಲಕ್ಷಗಟ್ಟಲೆ ಹಣ ಕಳೆದುಕೊಂಡ ರೈತರುಗಳು, ನೀರಿಲ್ಲದೆ ಐವತ್ತು ನೂರು ಎಕರೆ ಜಮೀನಿದ್ದು ಬೆಂಗಳೂರಿನಲ್ಲಿ ಕೆಲಸಕ್ಕೆ ಬಂದ ರೈತರುಗಳು, ಮೇವಿಲ್ಲದೆ ಸಾಯುವ ಜಾನುವಾರುಗಳನ್ನು ಕಾಣುವ ರೈತನಿಗಿಂತ, ಮನೆಯಲ್ಲಿ ನೀರು ಕಾಯಿಸಿದಾಗ ಫ್ಲೋರಾಯ್ಡ್ ಅಂಶದಿಂದ ಬೆಳ್ಳನೆ ಪದರ ಗಟ್ಟಿದ ಪಾತ್ರೆಯ ನೋಡುವ ತಾಯಿಗಿಂತ, ಹಳ್ಳಿಯಲ್ಲಿದ್ದು ದುಡ್ಡು ಕೊಟ್ಟು ಟ್ಯಾಂಕರ್ ಗಳಿಂದ ಬೋರೆವೆಲ್ಲ್ ನೀರನ್ನು ಪಡೆಯುತ್ತಿರುವವರಿಗಿಂತ  ಮತ್ತ್ಯಾರು ಶಾಶ್ವತ ನೀರಾವರಿಯ ಯೋಜನೆಯ ಮಹತ್ವ ಅರಿಯಲಾರರು . . .

ಅಲ್ಲೆಲ್ಲೋ ಗುಜರಾತಿನಲ್ಲಿ ಸತ್ತಿದ ನದಿಯ ಜೀರ್ಣೋದ್ಧಾರವಾಗಿದೆಯಂತೆ. ಕೊಳವೆಗಳಲ್ಲಿ ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ನೀರರಿದು ಕೃಷಿ ಬೆಳೆಯುತ್ತಿದೆ ಅಂತೆ. ಆದರೆ ನಮಲ್ಲಿ ಇಪ್ಪತ್ತು ವರ್ಷದ ಹಿಂದ ಪರಮಶಿವಯ್ಯ ವರದಿ ಇನ್ನೂ ವರದಿಯಾಗಿಯೇ ಉಳಿದುಕೊಂಡಿದೆ.  ಸರ್ಕಾರಗಳು ಹೋಗುತ್ತಿವೆ ಬರುತ್ತಿವೆ, ಜಲಸಂಪನ್ಮೂಲ ಇಲಾಖೆ ಬೇರೆ ಖೇಡು.
ಇವರುಗಳು ಯೋಚಿಸುವ ಹೊತ್ತಿಗೆ ನೂರಾರು ಕೋಟಿಗಳಲ್ಲಿ ಮುಗಿಯುವ ಯೋಜನೆಗಳು ಲಕ್ಷಕೋಟಿ ಯೋಜನೆಗಳಾಗಿರುತ್ತವೆ.

ನನ್ನೂರು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಗ್ರಾಮ. ನಮ್ಮ ಕಷ್ಟಗಳು ಪರಿಹಾರವಾಗಬೇಕೆಂದರೆ ಭದ್ರಾ ಮೇಲ್ದಂಡೆ ಮುಗಿಯಬೇಕು. ಅದಿನ್ನಾವ ದಶಕಕ್ಕೋ. ನನ್ನೂರಿಗೂ ಎತ್ತಿನಹೊಳೆ ಯೋಜನೆಗೂ ಯಾವುದೇ ಸಂಭಂದ ಇಲ್ಲ. ಆದರೂ ಒಬ್ಬ ಬಯಾಸೀಮಿಗನಾಗಿ . . . .

ತನ್ನ ಮಹತ್ವಾಕಾಂಕ್ಷೆ ಯೋಜನೆಗಳೊಂದಿಗೆ ಮೋದಿ ಅಟಲ್ ರ ಕನಸ್ಸಿನ "ನದಿ ಜೋಡಣೆ" ಯೋಜನೆಯನ್ನು ಕೈಗೆತ್ತಿಕೊಂಡರೆ . . .  ತಮ್ಮ ಎಂದಿನ ಮಸಾಲೆ ಹಾಗೂ ಋಣಾತ್ಮಾಕ ವಿಷಯಗಳ ಜೊತೆ ಇಂತಹ ವಿಷಯಗಳನ್ನು ಚರ್ಚಿಸಲು ಒಮ್ಮತ ಮೂಡಿಸಲು ಮಾಧ್ಯಮಗಳು ವೇದಿಕೆ ನಿರ್ಮಿಸುವ ಸಾಮಾಜಿಕ ಕಳಕಳಿ ತೋರ್ಪಡಿಸಿದರೆ  . . .