Sunday, January 27, 2013

ಕನಸುಗಳ ಬೆನ್ನತಿ ಹೊರಟವರು ....

ಈ ಲೇಖನವನ್ನು ಎರಡು ರೀತಿಯಾಗಿ ಬರೆಯಬಹುದೆಂದು ಯೋಚನೆ ಬಂತು. ಒಂದು ನನ್ನ ಬಗ್ಗೆಯೇ ಬರೆಯುತ್ತಾ ಹೋಗುವುದು; ನನ್ನದೇ ಬ್ಲಾಗ್ ತಪ್ಪೇನಿಲ್ಲ ಅನ್ನಿ ;) ಆದರೆ ಅದು ನನ್ನ ಆತ್ಮಕಥನವಾಗಿಬಿಡುತ್ತದೆ. ಅದು ಹಾಗೆ ಆಗದೇ ಊರು ಬಿಟ್ಟು ಬೇರೆಡೆ ಓದುವ , ಬೇರೆಡೆ ದುಡಿಯುವ ಹಳ್ಳಿಗರ ಕಥೆ-ವ್ಯಥೆ ಆಗಬೇಕೆಂಬ ಆಶಯದಿಂದ ಎರಡನೇ ರೀತಿ ಆಯ್ದುಕೊಂಡೆ. ತುಂಬ ವಿಸ್ತಾರವಾದ ವಿಷಯವಾದರೂ ಚೊಕ್ಕದಾಗಿ ಬರೆಯಬೇಕೆನ್ನುವ ಆಸೆ, ನೋಡೋಣ ಏನಾಗುವುದೋ ಎಂದು.

ಎಲ್ಲೋ ಹುಟ್ಟಿ, ಯಾವುದೋ ಪ್ರದೇಶದಲ್ಲಿ ಬೆಳೆದು,ಮತ್ಯಾವುದೋ ಪ್ರದೇಶದಲ್ಲಿ ವಾಸಿಸುವುದು ಈ ಔದ್ಯೊಗಿಕ, ಜಾಗತಿಕ ಯುಗದಲ್ಲಿ ಪ್ರತಿಯೊಬ್ಬ ಹಳ್ಳಿಗನು ಎದುರಿಸಲೇಬೇಕಾದ ಕಟು ಸತ್ಯ.
ಮಾಲಿನ್ಯವಿಲ್ಲದ,ಸುಂದರ ಪರಿಸರದ,ಗುಡ್ಡ ಬೆಟ್ಟ ಕೆರೆ ತೊರೆ,ಹೊಲ ಗದ್ದೆ,ಪ್ರಾಣಿ ಪಕ್ಷಿ,ಜಾನಪದ ಸೊಗಡಿನ ಜಾತ್ರೆ ಉತ್ಸವ ಇಂತಹ ಹತ್ತಾರು ಹಲವಾರು ವಿಶೇಷತೆಗಳು ತುಂಬಿರುವ ಸಣ್ಣ ಹಳ್ಳಿಗಳಲ್ಲಿ ಜನಿಸಿರುತ್ತೇವೆ.
ತಂದೆ ತಾಯಿ, ಬಂಧು ಬಳಗ ಇವರುಗಳ ಪ್ರೀತಿಯ ಪಲ್ಲಕ್ಕಿಯಲ್ಲಿ ಮೆರೆಯುತ್ತಿರುತ್ತೇವೆ. ಅಲ್ಲಿನ ಆಟಗಳೇ ಬೇರೆ, ಪಾಠದ ರೀತಿಯೇ ಬೇರೆ ಅಲ್ಲಿ ಕನ್ನಡ ಮಾಧ್ಯಮವಾಗಲಿ ಆಂಗ್ಲ ಮಾಧ್ಯಮವಾಗಲಿ ಎಲ್ಲ ಒಂದೇ ...
ಚೆನ್ನಾಗಿ ಓದುತಿದ್ದರೆ, ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದರೆ ಪ್ರತಿಯೊಬ್ಬರ ಮನೆಯಲ್ಲೂ ನಮ್ಮ ಹೆಸರು, ನಾವು ಯಾರೆಂಬುದು ಗೊತ್ತಿರುತ್ತದೆ.
ಅಲ್ಲಿ ನಾವು ಎದುರಿಸಬೇಕಾದ ಸ್ಪರ್ಧಾ ಜಗತ್ತಿಗೆ ಮಿತಿ ಇರುತ್ತದೆ. ಆದರೆ ಇಲ್ಲಿ ಸಿಗುವ ಅನುಭವ ಅನನ್ಯ. ಇಲ್ಲಿ ಕಲಿಯುವ ಸಣ್ಣ ಪುಟ್ಟ ಸಂಗತಿಗಳು ನಮ್ಮ ಜೀವನಕ್ಕೆ ಆಧಾರ. ಉನ್ನತ ವ್ಯಾಸಂಗ ಮದಬೇಕೆನ್ನುವವರು ಇಂತಹ ಹಳ್ಳಿಯನ್ನು ಬಿಟ್ಟು ಒಂದಲ್ಲಾ ಒಂದು ದಿನ ಪಟ್ಟಣದೆಡೆಗೆ ಹೆಜ್ಜೆ ಹಾಕಲೇಬೇಕಾಗುತ್ತದೆ.

                  
ಹೊಸ ಜನ,ಹೊಸ ಸ್ಥಳ,ಹೊಸ ಪರಿಚಯಗಳು,ಹೊಸ ಅನುಭವಗಳು,ಹೊಸ ಸವಾಲುಗಳು ...
ಹೀಗೆ ಈ ಹೊಸ ಪ್ರಪಂಚ ಕಾಯಿ ಹಣ್ಣಾಗುವಂತೆ , ವ್ಯಕ್ತಿತ್ವ ವಿಕಸಿಸುವ ಸುವರ್ಣಾವಕಾಶವನ್ನು ನಮಗೊದಗಿಸುತ್ತದೆ.
"ಒಳ್ಳೆಯದು-ಕೆಟ್ಟದು" ಒಂದೇ ನಾಣ್ಯದ ಎರಡು ಮುಖಗಳಿದಂತೆ. ನಾವು ಬರುವ ಹೊಸ ಜಾಗದಲ್ಲಿ ಎಲ್ಲ ಒಳ್ಳೆಯದೇ ಇರುತ್ತದೆ ಎಂದೇನಲ್ಲ... ನಮ್ಮ ಗುರಿ ನಮ್ಮ ಧ್ಯೇಯಗಳನ್ನು ಮನದಲ್ಲಿಟುಕೊಂಡು ಹಂಸ ಹೇಗೆ ನೀರಿರುವ ಹಾಲಿನಲ್ಲಿ ಕೇವಲ ಹಾಲನ್ನು ಹೀರುವುದೋ ಹಾಗೆಯೇ ಉತ್ತಮ ಸಂಗತಿಗಳೊಂದಿಗೆ ಬೆಳೆಯಬೇಕು..
ವಿದ್ಯಾರ್ಥಿ ನಿಲಯಗಳಲ್ಲಿ ನೆಲೆಸುವ ಅನುಭವ ನಿಜವಾಗಿಯೂ ಅಪರೂಪ ಅನನ್ಯ.. ವಿವಿಧ ಪ್ರದೇಶದ ಜನರು,ಹಲವು ಬಗೆಯ ಭಾಷೆ,ವಿಧ ವಿಧವಾದ ಹವ್ಯಾಸ,ಹಲವು ಗುರಿ,  ಅನೇಕ ರೀತಿಯ ವ್ಯಕ್ತಿತ್ವ...ಎಲ್ಲರಲ್ಲಿ ಬೆರೆತು, ಎಲ್ಲರೊಳಗೊಂದಾಗುವ ಸ್ಥಳ ಹಾಸ್ಟೆಲ್... ಕೂಡಿ ಬಾಳುವ, ಹಂಚಿ ತಿನ್ನುವ,ಸುಖದಲ್ಲಿ ಸಂಭ್ರಮಿಸುವ,ದುಃಖದಲ್ಲಿ ಭಾಗಿಯಾಗುವ,ಒಬ್ಬರು ಮತ್ತೊಬ್ಬರನ್ನು ಸುಶೃಸಿ ಹಾರೈಕೆ ಮಾಡುವ .. ಒಟ್ಟಿನಲ್ಲಿ ಬದುಕಿನಲ್ಲಿ ಪರಿಪೂರ್ಣ ವ್ಯಕ್ತಿಯಾಗುವ ಗುಣಗಳನ್ನು ಕಲಿಸುತ್ತದೆ ಹಾಸ್ಟೆಲ್..

ನಗರ ಸೌಲಭ್ಯಗಳನ್ನು ಸವಿಯುತ್ತಾ,ತಂತ್ರಜ್ಞಾನವನ್ನು ರುಚಿಸುತ್ತಾ,ನವ್ಯ ಜೀವನ ಶೈಲಿಯನ್ನು ರೂಢಿಸಿಕೊಳುತ್ತ "ಹಳೆ ಬೇರು" ಹೊಸ ಚಿಗುರಿನ ಹೆಮ್ಮರವಾಗುತ್ತದೆ...
ಏನೇ ಆದರೂ ಹಳ್ಳಿಗೆ ಹೋದಾಗ ಹಳ್ಳಿಯವನಾಗಿರದೆ,ಪಟ್ಟಣದ ಅಹಂಕಾರಗಳನ್ನು ತೋರಿಸಿದರೆ ನಮ್ಮ ಗೌರವಕ್ಕೆ ಚುತಿ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ..

ನಾವಾಗಿಯೇ ಅಲ್ಲದಿದ್ದರೂ, ಕಾಲ ಚಕ್ರದಲ್ಲಿ ಮನೆಯಿಂದ ದೂರವಿರುತ್ತೇವೆ. ನಾವು ನಮ್ಮ ಸುಖ, ನಮ್ಮ ಸ್ನೇಹಿತರು, ನಮ್ಮ ಖುಷಿ ಇವುಗಳ ಮಧ್ಯೆ ಎಲ್ಲೋ ಕೆಲವೊಮ್ಮೆ ನಮ್ಮ ಪೋಷಕರಿಂದ ದೂರವಾಗುತ್ತಿದ್ದೇವೇನೋ,ಅವರ ಮೇಲಿನ ನಮ್ಮ ಬಂಧ ಪ್ರೀತಿಗಳು ಕಡಿಮೆಯಾಗುತಿದೆಯೋ ಎಂಬ ಭ್ರಮೆ ನಂನಂತು ಕಾಡಿದೆ ..
ಈ ಭ್ರಮೆ ಕಾಡದೇ "ದೂರವಿದ್ದವರ ಮೇಲೆಯೇ ಪ್ರೀತಿ ಜಾಸ್ತಿ" ಎಂಬ ಮಾತಿನಂತೆ ನಮನ್ನು ಹೆತ್ತವರ ಮೇಲೆ ನಮ್ಮ ಪ್ರೀತಿ ನಮ್ಮ ಗೌರವ ಹೆಚ್ಚಲಿ ಎಂಬ ಆಶಯ ...


 

Saturday, January 26, 2013

ಸದಾ ಕಾಡುವ ಅನುಪಸ್ಥಿತಿ .....

 
 
ಏಕೋ ಏನೋ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ,
ಇಲ್ಲದ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಊರಿಂದ ನಾ ಬಂದು, ಬಾಗಿಲಲಿ ನಿಂತಾಗ,
ಕೈ ಚೀಲ ಕಸಿದು, ಉಡುಗೊರೆಯ ಹುಡುಕಲು,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ಅಮ್ಮ ಕೊಡುವ ತಿಂಡಿಯ ಸಮಪಾಲು ಕೇಳಲು,
ಟಿ.ವಿ ರಿಮೋಟಿಗೆ ಕಚ್ಚಾಡಲು,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ತನ್ನ ಸಹೋದರಿಯ ಹುಟ್ಟು ಹಬ್ಬಕ್ಕೆ
ಉಡುಗೊರೆ ಕೊಳ್ಳುವ ಸ್ನೇಹಿತನ ಜೊತೆ ಹೋದಾಗ,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ನನ್ನ ತಂಗಿ ನನ್ನಂತೆಯೇ ಜಾಣೆ,
ನನ್ನನ್ನೇ ಮೀರಿಸಿ ಗುರಿಯೊಂದನ್ನು ಸಾಧಿಸಿದ್ದಾಳೆ
ಎಂದು ಬೀಗುವ ಸ್ನೇಹಿತನ ಹೆಮ್ಮೆಯ ಮಾತನ್ನು ಕೇಳಿದಾಗ,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಶ್ರಾವಣ ಮಾಸದ ಪೌರ್ಣಮಿದಿನದಂದು,
ರಾಖಿ ಕಟ್ಟುವ ಸಹೋದರಿಯರ ಕಂಡಾಗ,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ಸೀರೆ ಧರಿಸಿ, ದೀಪಾವಳಿಯಲ್ಲಿ ಮನೆ ಬೆಳಗಿಸುವ,
ಸಂಕ್ರಾಂತಿಯಲಿ ಎಳ್ಳು-ಬೆಲ್ಲ ಬೀರುವ ಗೆಳತಿಯರ ಕಂಡಾಗ,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಸಹೋದರನ ಸುಖದಲ್ಲಿ ಸಂಭ್ರಮಿಸುವ,
ದುಃಖದಲಿ ಸಂತೈಸುವ,
ಇಲ್ಲದಿರುವ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ;
ತಂಗಿಯ ವಿವಾಹದ ನಂತರವೇ ನನ್ನದು !!!
ಎನ್ನುವ ಗೆಳಯರ ಜವಾಬ್ದಾರಿಯ ಕುರುಹನ್ನು ಕಂಡಾಗ,
ಇಲ್ಲದಿರುವ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...

ಏಕೋ ಏನೋ ನಿನ್ನ ಅನುಪಸ್ಥಿತಿ ನನ್ನನ್ನು ಕಾಡುತಿದೆ,
ಅಮ್ಮನ ಬಳಿ ನನಗೊಬ್ಬಳು ತಂಗಿ ಇರಬೇಕಿತ್ತು ಎಂದು ಪೇಚಾಡುವಾಗ,
ಇಲ್ಲದ ನಿನ್ನನ್ನು ಮನಸ್ಸು ನೆನೆಯುತಿದೆ, ಸ್ಮರಿಸುತಿದೆ...